ಬ್ರಿಗೇಡಿಯರ್ ರಾಯ್ ಸಿಂಗ್ ಯಾದವ್, (೧೭ ಮಾರ್ಚ್ ೧೯೨೫ - ೨೩ ಮಾರ್ಚ್ ೨೦೧೭ ) ಅವರು ಭಾರತೀಯ ಸೇನೆಯ ಅಧಿಕಾರಿ. ಇವರು ೧೯೬೭ರ ನಾಥು ಲಾ ಮತ್ತು ಚೋ ಲಾ ಘರ್ಷಣೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದರು. ಸಂಘರ್ಷದ ಸಮಯದಲ್ಲಿ ಅವರು ಪ್ರದರ್ಶಿಸಿದ ಧೈರ್ಯಕ್ಕಾಗಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ಸೇನಾ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. ಅವರನ್ನು ನಾಥು ಲಾ ಹುಲಿ ಎಂದೂ ಕರೆಯಲಾಗುತ್ತದೆ. == ಆರಂಭಿಕ ಜೀವನ == ರಾಯ್ ಸಿಂಗ್ ಯಾದವ್ ಅವರು ಪಂಜಾಬ್ ಪ್ರಾಂತ್ಯದ ಗುರ್ಗಾಂವ್ ಜಿಲ್ಲೆ ಕೋಸ್ಲಿ ಗ್ರಾಮದಲ್ಲಿ (ಈಗಿನ ಹರಿಯಾಣ ರಾಜ್ಯದ ರೆವಾರಿ ಜಿಲ್ಲೆ) ೧೯೨೫ರ ಮಾರ್ಚ್ ೧೭ರಂದು ಜನಿಸಿದರು. ಅವರ ತಂದೆ ರಾಯ್ ಸಾಹಿಬ್ ಗಣಪತ್ ಸಿಂಗ್ ಅವರು ೧೯೨೦ರ ದಶಕದಲ್ಲಿ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ರಾಯ್ ಸಿಂಗ್ ಅವರು ತಮ್ಮ ಹಿರಿಯ ಕೇಂಬ್ರಿಡ್ಜ್ ಪದವಿಯನ್ನು ಜುಲಂದೂರಿನ ಕಿಂಗ್ ಜಾರ್ಜ್ ಮಿಲಿಟರಿ ಶಾಲೆಯಿಂದ ಪಡೆದರು. == ಸೇನಾ ವೃತ್ತಿಜೀವನ == ರಾಯ್ ಸಿಂಗ್ ೧೯೪೪ ರಲ್ಲಿ ಎರಡನೇ ಲೆಫ್ಟಿನೆಂಟ್ ಆಗಿ ಸೇನೆಗೆ ಸೇರಿದರು. ೧೯೫೦ರ ಡಿಸೆಂಬರ್ ೧೦ರಂದು ಅವರನ್ನು ೨ ಗ್ರೆನೇಡಿಯರ್‌ಗಳಿಗೆ ನಿಯೋಜಿಸಲಾಯಿತು. ೧೯೬೭ ರಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿದ್ದ ಅವರು ಸಿಕ್ಕಿಂ ನಾಥು ಲಾ ನಿಯೋಜಿಸಲಾಗಿದ್ದ ೨ ಗ್ರೆನೇಡಿಯರ್ಸ್ ಬೆಟಾಲಿಯನ್‌ಗೆ ಕಮಾಂಡಿಂಗ್ ಮಾಡುತ್ತಿದ್ದಾಗ, ಚೀನಾದ ಸೇನೆಯು ಭಾರತದ ವಶದಲ್ಲಿದ್ದ ಭೂಪ್ರದೇಶದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿ ನಾಥು ಲಾ ಮತ್ತು ಚೋ ಲಾ ಘರ್ಷಣೆಗಳಿಗೆ ಕಾರಣವಾಯಿತು. ನಾಥು ಲಾ ಕಣಿವೆಯನ್ನು ಹಿಡಿದಿಡಲು ಮತ್ತು ಚೀನಾದ ಆಕ್ರಮಣಗಳನ್ನು ಸೋಲಿಸಲು, ಲೆಫ್ಟಿನೆಂಟ್ ಕರ್ನಲ್ ರಾಯ್ ಸಿಂಗ್ ತನ್ನ ಸೈನಿಕರನ್ನು ಮುಂಭಾಗದಿಂದ ಮುನ್ನಡೆಸಿದರು ಮತ್ತು ಶತ್ರುಗಳ ಎದುರಿನಲ್ಲಿ ಶೌರ್ಯ ಮತ್ತು ಅಸಾಧಾರಣ ನಾಯಕತ್ವವನ್ನು ಪ್ರದರ್ಶಿಸಿದರು. == ಜನಪ್ರಿಯ ಸಂಸ್ಕೃತಿಯಲ್ಲಿ == ೨೦೧೮ ರ ಭಾರತೀಯ ಹಿಂದಿ ಭಾಷೆಯ ಚಲನಚಿತ್ರ ಪಲ್ಟಾನ್ ನಲ್ಲಿ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರು ಬ್ರಿಗೇಡಿಯರ್ ರಾಯ್ ಸಿಂಗ್ ಯಾದವ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. == ಇದನ್ನೂ ನೋಡಿ == ನಾಥು ಲಾ ಮತ್ತು ಚೋ ಲಾ ಘರ್ಷಣೆಗಳು == ಇತರೆ ಓದು == ಮೇಜರ್ ಜನರಲ್ ಡಿ. ಕೆ. ಪಾಲಿತ್, ವಾರ್ ಇನ್ ದಿ ಹೈ ಹಿಮಾಲಯ, ಲ್ಯಾನ್ಸರ್ಸ್ == ಉಲ್ಲೇಖಗಳು ==